Tuesday, July 17, 2012

ಮನುಷ್ಯರಾಗುವ

ಬದಲಾದದ್ದು
ಜಗತ್ತಲ್ಲ;
ನಾನು ನೀನು...
ಚಿವುಟಿದಷ್ಟು
ಗರ್ಭದ ಕಾವಿನಿಂದ
ಹಡೆಯುವ ಆಸೆಗಳು...
ಮೈಗೆ ಮೈ ಅಂಟಿ
ಉಸಿರುಗಟ್ಟುತ್ತಾ
ತೆರೆದುಕೊಳ್ಳುವ ಬಯಕೆಗಳು...

ಬದಲಾದದ್ದು;
ಎದೆಬಿರಿದು ನೊಂದ
ನಿನ್ನ ಕಣ್ಣಿನಲ್ಲಿ ಹರಿದ
ರಕ್ತಸಿಕ್ತ ಹನಿಗಳು..

ಈಗ...
ಬಚ್ಚಿಟ್ಟ ನೋವು, ನಗು
ತುಂಬಿ ಹೇಸಿಗೆ ಹುಟ್ಟಿಸುತ್ತಿವೆ...
ಯಾಕೆ? ಏನು? ಹೇಗೆ?
ಎಂಬ ಪ್ರಶ್ನೆಗಳು ಪ್ರಶ್ನೆಗಳಾಗೇ
ಊಳಿಡುತ್ತಾ...

ಮತ್ತೆ ನಗಬೇಡ
ಗುಳಿಬಿದ್ದ ಕೆನ್ನೆಯ
ಮೇಲೆ ರಕ್ತ ಕಲೆಗಳಂಟಿವೆ!
ಮುಡಿಯೇರಿದ ಹೂ
ನರಳಿ ಘಮಲು ಕಳೆದು ಹೊಸಕಿವೆ!
ಗೂಡು ಕಟ್ಟಿದ ನಿನ್ನೆದೆಯಲಿ
ಮಾಗದ ಗಾಯಗಳೇ ಹೆಚ್ಚು

ಬರೀ ಎದೆಗಪ್ಪಿ ನಟಿಸಬೇಡ
ಒಂದಷ್ಟು ತಾ
ನೋವು, ಯಾತನೆ
ಕರಗಲಿ ನಿನ್ನ ದುಗುಡ

ಕತ್ತಲೊಳಗೆ ಬೆತ್ತಲಾಗುತ್ತಾ
ದಿಗಿಲುತನಗಳನ್ನು ಕೊಡವಿ
ಮನುಷ್ಯರಾಗುವ
ನಾನು ನೀನು..

ಮಳೆ ಹನಿ ತೊಯ್ದ ಕನಸುಗಳಲಿ
ಜೀವಂತ ಉಸಿರಾಟದಲಿ
ನೊಂದ ನೆನಪುಗಳಿಗೆ ಮುಲಾಮು ಹಚ್ಚುತ್ತಾ....

Tuesday, June 19, 2012




ಗೆಳತಿ
ನಿನ್ನ ನಿಜ
ದುಃಖವ
ಮರೆಸಿ
ಮುಗುಳುನಗೆಯ
ಬೀರಿ
ಒಲವನ್ನು ದೂಡಬಹುದೇ..?
ನನ್ನಲ್ಲಿ
ಧಗಧಗನೇ
ಉರಿವ
ಒಲವನ್ನು
ನಿನ್ನ ಮುಗುಳುನಗೆಯೂ
ತಣಿಸಬಹುದೇ..?

Saturday, June 9, 2012

ಸೋಲು-ಗೆಲುವು



ನೋವನ್ನಡಗಿಸಿ ನಕ್ಕು ಸುಮ್ಮನಾದೆ
ನಿನಗೆ ಅರಿವಾಗಲಿಲ್ಲ
ಮೌನವನ್ನು ಕೊಂದು ಮಾತನ್ನು ಮುಕ್ತಗೊಳಿಸಿದೆ
ನಿನ್ನ ನಂಬುಗೆ ಹೆಮ್ಮರವಾಗಲಿಲ್ಲ..

ಪ್ರತಿದಿನವೂ ಸೋತೆ...
ನಿನಗಾಗಿಯೇ ಎಂಬ ಭ್ರಮೆಯಲಿ
ನೀನು ಗೆದ್ದೆ ಎಂದು ಬೀಗುತ್ತಿದ್ದೆ
ಆ ಭ್ರಮೆಯ ಒಣ ಪ್ರತಿಷ್ಠೆಯಲಿ...

ಮೌನ, ನೋವು, ಮಾತು
ಈಗ ಪರಸ್ಪರ ಕಾದಾಟಕ್ಕೀಳಿದಿವೆ...
ನಿನ್ನ ನಗು ಈ ತುದಿಯಿಂದ ಆ ತುದಿಯವರೆಗೂ
ಹರಿದು ಬೀಗುತ್ತಿದೆ ಮತ್ತೆ ಗೆದ್ದೆ ಎಂದು

ನನ್ನ ಬಂಜರು ಹೃದಯವನ್ನು
ತುಂಡು ತುಂಡಾಗಿ ಸೀಳಿ, ರಕ್ತವನ್ನು ಬಸಿದು
ನಿನ್ನ ನಗೆಯನ್ನು ಸಿಂಗರಿಸಿಕೊಂಡು
ಧೇನಿಸುತ್ತಿದ್ದೇನೆ...

ಇನ್ನೂ ನಿನ್ನ ಒಣಪ್ರತಿಷ್ಠೆ
ಒಲವೊಂದೆ ಗೆಲುವೆಂಬ ನನ್ನ ಭ್ರಮೆಯೂ ಬಲಿಯಲಿ ಎಂದು...

Thursday, April 26, 2012

ಪರಭಾಷೆ ‘ಮನರಂಜನೆ ರೂಪದ ಸಾಂಸ್ಕೃತಿಕ ದಾಳಿ’ಯಾದರೆ, ಡಬ್ಬಿಂಗ್ ಮತ್ತೇನು?

ಡಬ್ಬಿಂಗ್ ಈ ಖಾಲಿ ಬಾಕ್ಸ್್ನಲ್ಲಿ ಸೇರಿಬಿಡಲಿ...



ಪರಭಾಷಾ ಚಿತ್ರಗಳನ್ನು ನೋಡಿದಾಗ ಆ ಭಾಷೆಯ ಹೇರಿಕೆಯೂ ಕನ್ನಡಿಗರ ಮೇಲೆ ಏರಿದಂತೆ. ನಮ್ಮ ನಾಡಿನ ಉದ್ದಿಮೆ, ಭಾಷೆ, ಸಂಸ್ಕೃತಿಗಳನ್ನೆಲ್ಲಾ ಕಾಪಾಡಿಕೊಳ್ಳೋ ಮೂಲಭೂತ ಹಕ್ಕು ನಮಗಿದ್ದೇ ಇದೆ. ಅದು ಮನರಂಜನೆ ರೂಪದ ಸಾಂಸ್ಕೃತಿಕ ದಾಳಿ.
- ಹೀಗೆ ಪರಭಾಷ ಚಿತ್ರಗಳ ಕುರಿತು ನೀವು ಹೇಳುತ್ತೀರಿ. ಹಾಗಾದರೆ ಡಬ್ಬಿಂಗ್ ಅಂದರೆ ಮತ್ತೇನು?
ಅದು ಸಾಂಸ್ಕೃತಿಕ ದಾಳಿಯ ಮತ್ತೊಂದು ರೂಪವಲ್ಲವೇ? ನಮ್ಮ ಸಂಸ್ಕೃತಿಗೆ, ಉದ್ದಿಮೆಗೆ ಮತ್ತು ಉದ್ಯೋಗಕ್ಕೆ ಎರವಾಗುವಂತ ಹಲವು ಲಕ್ಷಣಗಳನ್ನು ಹೊಂದಿಲ್ಲವೇ. ಡಬ್ಬಿಂಗ್ ಸಂಸ್ಕೃತಿಯಿಂದಾಗಿ ಕನ್ನಡ ಚಿತ್ರರಂಗಕ್ಕೆ ಆಗುವ ನಷ್ಟಕ್ಕೆ ಹೊಣೆಗಾರರ್ಯಾರು? ಅಲ್ಲಿನ ತಂತ್ರಜ್ಞರ, ಕಲಾವಿದರ ಬದುಕಿನ ಕಥೆಯೇನು? ಅದರ ಅವಶ್ಯಕತೆ ನಮಗಿದೆಯೇ?

ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆದ ಚಿತ್ರಗಳನ್ನು ನಾವು ನೋಡುತ್ತ ಇದ್ದಾರೆ. ಅಲ್ಲಿನ ಪರಿಸರಕ್ಕೆ ಒಗ್ಗುವುದು, ನಾಯಕನಟಿಯರ ಗೀಳು ಹೆಚ್ಚಿಸಿಕೊಳ್ಳುವುದು, ಪರಭಾಷಾ ಚಿತ್ರಗಳ ಮಾರುಕಟ್ಟೆ ಮತ್ತೂ ವಿಸ್ತಾರಗೊಂಡು ಕನ್ನಡ ಚಿತ್ರ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುವುದಲ್ಲವೇ?

ಮನರಂಜನೆ ಯಾರೊಬ್ಬರ ಸ್ವತ್ತಲ್ಲ. ಎಲ್ಲರಿಗೂ ದಕ್ಕಬೇಕು, ದಕ್ಕಿಸಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಪ್ರತಿಯೊಬ್ಬರ ಹಕ್ಕಿಗೂ ಒಂದು ಅರಿವಿದೆ. ಆ ಅರಿವು ಏಕರೂಪತೆ ಹೊಂದಿರುತ್ತದೆ. ಡಬ್ಬಿಂಗ್‌ನಿಂದ ರೂಪಾಂತರಗೊಂಡ ಪರಭಾಷಾ ಚಿತ್ರ, ಅದರಲ್ಲಿ ಒಳಗೊಂಡಿರುವ ಪರಿಸರ, ವೇಷಭೂಷಣ, ನಾಯಕನಟಿಯರ ನಟನೆ, ವರ್ತನೆ ನೋಡುಗರ ಮೇಲೆ ಏಕರೂಪತೆಯನ್ನು ಸಾಧಿಸಲಾಗುವುದಿಲ್ಲ.

ಪರಭಾಷಾ ಚಿತ್ರವೊಂದು ಬೇರೆ ಭಾಷೆಯಲ್ಲಿ ಡಬ್ ಮಾಡಿದ ಚಿತ್ರವನ್ನೇ ಗಮನಿಸಿ. ತುಟಿಯ ಚಲನೆಗಳಲ್ಲಿ ಕಂಡುಬರುವ ಲೋಪದೋಷಗಳಿಂದಾಗಿ ಚಿತ್ರ ಆಸಕ್ತಿ ಕಳೆಗುಂದುತ್ತದೆ ಎಂಬುದು ಹಲವರ ಅಭಿಪ್ರಾಯ. ಅಂತಹುದರಲ್ಲಿ ಕನ್ನಡಕ್ಕೆ ಡಬ್ ಆದಾಗ ಆ ಲೋಪಗಳನ್ನು ಎದುರಿಸುವುದು ಕಷ್ಟಕರವೇ. ನಮ್ಮ ತಂದೆಗೋ, ನಮ್ಮ ಮಕ್ಕಳಿಗೋ, ನಮ್ಮ ಅಜ್ಜಿಗೋ ತೋರಿಸಬೇಕೆಂಬ ಡಬ್ ಚಿತ್ರ ಯಾವ ರೀತಿಯಲ್ಲಿ ಪರಿಣಾಮಕಾರಿಯುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವರನ್ನು ನಾವೇ ದಾರಿತಪ್ಪಿಸಿದಂತಾಗುತ್ತದೆಯಲ್ಲವೇ?

ಡಬ್ಬಿಂಗ್ ಬಂದರೆ ಎಲ್ಲವೂ ಕನ್ನಡಮಯವಾಗುತ್ತದೆಂದು ಕೆಲವರು ಪರಿಭ್ರಮಿಸುತ್ತಿದ್ದಾರೆ. ಇದರಿಂದಾಗಿ ಬೇರೆ ಭಾಷೆಯ ಕಲಿಕೆ ಮಾರ್ಗವನ್ನು ನಮ್ಮ ಮಕ್ಕಳಿಗೋ, ನಮ್ಮ ಕುಟುಂಬಕ್ಕೋ ತಪ್ಪಿಸಿದಂತಾಗುವುದಿಲ್ಲವೇ? ಜ್ಞಾನದ ವಿಸ್ತಾರವನ್ನು ಆ ಮೂಲಕ ತಡೆದಂತಾಗುತ್ತದೆಯಲ್ಲವೇ? ನಮ್ಮವರೇ ಆದ ಭೀಮಸೇನ್ ಜೋಷಿ ರಾಗಕ್ಕೂ, ಮತ್ತೊಬ್ಬ ಭಾಷಿಕನ ರಾಗಕ್ಕೂ ನಾವು ಕಿವಿಗೊಡುತ್ತೇವೆ. ಅದರಲ್ಲಿಯೇ ತಲೀನರಾಗುತ್ತೇವೆ, ಮುಳುಗುತ್ತೇವೆ. ಅಲ್ಲಿ ಭಾಷೆ ಬದಲಾಗಿದೆ. ಅವರವರ ಭಾಷಿಗರಿಗೆಯೇ ಸ್ಪಷ್ಟವಾಗಿ ಆ ಹಾಡಿನ ಅರ್ಥ ತಿಳಿದಿರುವುದಿಲ್ಲ. ಆದರೆ ಸಂಗೀತದ ಭಾವ ಮೈಮರೆಸುತ್ತದೆ. ಅದಕ್ಕೀದೆ ಆ ಶಕ್ತಿ. ಆ ಸಂಗೀತದ ವಿಸ್ತಾರ ಭಾಷೆಗಿಂತಲೂ ಮಿಗಿಲುಗೊಂಡು ಭಾವದ ರೂಪ ತಳೆಯುತ್ತದೆ. ಅದೇ ರೀತಿ ಪರಭಾಷೆಯ ಚಿತ್ರವನ್ನು ನೋಡುವುದಕ್ಕೆ ಭಾಷೆಯ ಹಂಗು ಯಾಕೆ ಬೇಕು? ಭಾವ ಸಾಕಲ್ವೇ? ಭಾಷೆಗಿಂತ ಭಾವ ಪ್ರಾಮುಖ್ಯತೆ ಪಡೆದಿರುವುದರಿಂದ ಆ ಭಾಷೆಯನ್ನು ಕಲಿಸಲು ಪ್ರೇರಣೆ ನೀಡಿದಂತಲ್ಲವೇ?
ಅದು ಜ್ಞಾನದ ರಾಜಮಾರ್ಗವಲ್ಲವೇ?

ಕೊನೆಯದಾಗಿ
ಸೌಂದರ್ಯ ಎಂಬುದು ಮುಖದಲ್ಲಿ ಇರುವುದಿಲ್ಲ. ಅದು ಹೃದಯದೊಳಗಿನ ಬೆಳಕು
-ಖಲೀಲ್ ಗಿಬ್ರಾನ್
ಆ ಹೃದಯದೊಳಗಿನ ಬೆಳಕು ಭಾವದಿಂದ ತೆರೆದುಕೊಂಡ ಸೌಂದರ್ಯವೇ ಹೊರತು... ಭಾಷೆಯಿಂದಲ್ಲ...

Wednesday, April 25, 2012

ಡಬ್ಬಿಂಗ್ ಪರ ಮತ್ತು ವಿರೋಧ, ಸಾರ್ವಜನಿಕ ಚರ್ಚೆಯಾಗಲಿ...?

ಡಬ್ಬಿಂಗ್ ಬೇಡ ಎಂದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನಗಳ ಮನಸ್ಥಿತಿ ಬಾವಿಯೊಳಗೆ ಅವಿತಿರುವ ಕೂಪಮಂಡೂಕಿನಂತಾಗಬಾರದು. ಅದರ ವಿಸ್ತಾರ ಜಗದಗಲ ಹರಡಲಿ. ಬೇಕು ಎಂದು ಕಾರ್ಮಿಕರ, ತಂತ್ರಜ್ಞರ ಬದುಕಿನ ಪ್ರಶ್ನೆಗೆ ಮುಳುವಾಗಬಾರದು. ಅವರ ಬದುಕನ್ನು ಬೇರೆಯದೇ ಉದಾಹರಣೆ ಕೊಟ್ಟು ಕವಾಡೆಯಾಟವಾಡಬಾರದು.

ಕನ್ನಡ ಚಿತ್ರರಂಗ ಡಬ್ಬಿಂಗ್ ಅನ್ನು ವಿರೋಧಿಸಿದ ಮಾತ್ರಕ್ಕೆ ಅದು ಅಸಂವಿಧಾನವಾಗುವುದಿಲ್ಲ. ಪ್ರಜಾಪ್ರಭುತ್ವದ ವಿರೋಧಿಯಾಗುವುದಿಲ್ಲ. ಪರಭಾಷಾ ಚಿತ್ರವನ್ನು ಡಬ್ ಮಾಡುವುದರಿಂದ ಕನ್ನಡ ಚಿತ್ರರಂಗದಲ್ಲಿ ಹಗಲಿರುಳು ದುಡಿಯುವ ತಂತ್ರಜ್ಞರು, ಅದನ್ನೇ ಬದುಕಾಗಿ ಅವಲಂಬಿಸಿಕೊಂಡಿರುವ ದಿನಗೂಲಿ ಮತ್ತು ಕಾರ್ಮಿಕರ ಕೆಲಸವನ್ನಷ್ಟೆ ಟಾರ್ಗೆಟ್ ಮಾಡುವುದು ಎಷ್ಟು ಸರಿ? ಇದರಲ್ಲಿ ಅವರ ಬದುಕಿನ ಪ್ರಶ್ನೆಯೂ ಅಡಗಿದೆ ಎಂಬುದು ಯಾಕೆ ಅರ್ಥವಾಗುತ್ತಿಲ್ಲ. ಬೇಕು! ಸೃಜನಶೀಲ ಪರಭಾಷಾ ಚಿತ್ರಗಳು, ಧಾರಾವಾಹಿಗಳು ಕನ್ನಡ ಜನ ಕನ್ನಡದ ರೂಪದಲ್ಲಿ ನೋಡಬಯಸುವವರಾದರೆ ಅದು ಸ್ವಾಗತಾರ್ಹ. ಸ್ವಪ್ರತಿಷ್ಠೆ ಸ್ವರೂಪಗಳು ರೂಪಾಂತರಗೊಂಡು ಕನ್ನಡದ ಚಿತ್ರರಂಗದ ಮೇಲೆ ಸವಾರಿ ಮಾಡುವುದು ಕೂಡ ಕೆಡುಕಿನ ಮತ್ತೊಂದು ದಾರಿ.

ಟೈಟಾನಿಕ್್ನಂತ ಸಿನಿಮಾಗಳನ್ನು ಕನ್ನಡದಲ್ಲಿ ನೋಡಬೇಕೆಂಬ ಉತ್ಸುಕತೆ ನಮಗೂ ಇದೆ. ಆದರೆ ಅಲ್ಲಿನ ವೇಷಭೂಷಣ ಮಕ್ಕಳ ಮೇಲೆ ಪರಿಣಾಮ ಬೀರಬಹುದೇನೋ ಎಂಬ ಭಯವಿದೆ. ಬರೀ ಡಬ್ಬಿಂಗ್್ನಿಂದಾಗಿ ಕಾರ್ಮಿಕ, ತಂತ್ರಜ್ಞರಿಗೆಷ್ಟೆ ನಷ್ಟವೆಂಬುದು ಬಿಟ್ಟು ಅದರ ತಿರುಳಿನಿಂದ ಕನ್ನಡ ಚಿತ್ರರಂಗದ ಮೇಲಾಗುವ ಪರಿಣಾಮವನ್ನು ಮನಗಾಣಬೇಕು. ಮೇಲಾಗಿ ಕನ್ನಡ ಚಿತ್ರರಂಗದ ಮಾರುಕಟ್ಟೆ ಸೀಮಿತ ಪ್ರದೇಶದವರೆಗೆ ಮಾತ್ರ ಉಳಿದುಬಿಟ್ಟಿದೆ. ಅದರ ವಿಸ್ತಾರ ಕ್ಷೇತ್ರ ಚಿಕ್ಕದ್ದು. ಕರ್ನಾಟಕದಲ್ಲಿ ಎಲ್ಲ ಭಾಷಿಗರು ಇದ್ದಾರೆ. ಅದರಲ್ಲಿ ಪರಭಾಷಿಕರು ಕನ್ನಡ ಚಿತ್ರಗಳನ್ನು ನೋಡುವುದು ವಿರಳ. ಅವರಿಗೆ ತಮ್ಮ ಭಾಷೆಗಳ ಚಿತ್ರಗಳೇ ಹೆಚ್ಚು ಆಕರ್ಷಿಸಿವೆ. ಆಕರ್ಷಿದ ಚಿತ್ರಗಳೆಲ್ಲಾ ಗುಣಮಟ್ಟ ಚಿತ್ರಗಳೇ ಆಗಿದ್ದರೂ ಅದರಲ್ಲಿಯೂ ಮಚ್ಚು ಲಾಂಗುಗಳು ವಿಜೃಂಭಿಸಿವೆ. ಐಟಂ ಸಾಂಗ್‌ಗಳಿವೆ.

ಅನೇಕ ಬಾರಿ ಕನ್ನಡದ ಚಿತ್ರಗಳಿಗೆ ಕರ್ನಾಟಕದಲ್ಲಿಯೇ ಥಿಯೇಟರ್ ಕೊರತೆ ಎದುರಿಸುವಂತ ಸಂದರ್ಭಗಳು ಬಂದಿವೆ. ಹಾಗಂತ ಕನ್ನಡದಲ್ಲಿ ಐಟಂ ಸಾಂಗ್ ಇಲ್ಲದ ಚಿತ್ರಗಳಿಲ್ಲ ಅಂತ ಅಲ್ಲ. ಸೃಜನಶೀಲತೆಯುಳ್ಳ, ಗುಣಮಟ್ಟವುಳ್ಳ ಚಿತ್ರಗಳು ಹೊರತಂದರೂ ಥಿಯೇಟರ್ ಮುಂದೆ ನಿಲ್ಲಲ್ಲು ಆಗದೇ ಸಿದಾ ಟಿವಿಯಲ್ಲಿ ವಿಜೃಂಭಿಸಿವೆ. ಕಲಾತ್ಮಕ ಚಿತ್ರಗಳನ್ನು ಥಿಯೇಟರ್‌ನಲ್ಲಿ ಕೂತು ನೋಡುವವರೇ ಇಲ್ಲ. ಅದು ಪ್ರಶಸ್ತಿಯ ಬಾಗಿಲನಲ್ಲಿ ನಿಂತಿರುತ್ತವಷ್ಟೆ. ಇತ್ತೀಚಿಗಂತೂ ಕನ್ನಡ ಚಿತ್ರಗಳಲ್ಲಿ ಸಪೂರ ಕಥೆ, ಚಿತ್ರಕಥೆ, ವಿಚಿತ್ರ ಗೀತ ರಚನೆ ಇನ್ನೂ ಹೀಗೆ ಹಲವು ಕಾರಣಗಳಿಂದ ಚಿತ್ರಗಳು ಮೇಲೇಳು ಆಗದೇ ಮಕಾಡೆ ಮಲಗಿವೆ.

ಇಂತಹ ಸಂದರ್ಭದಲ್ಲಿ ಪರಭಾಷೆ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಎನ್ನಡ ಇದು ಕನ್ನಡವೆಂದರೇ ಹೇಗೆ ಸಾಧ್ಯ? ಹಾಗಂತ ಇದು ಕನ್ನಡ ಚಿತ್ರರಂಗದ ಪಾಲಾಯನವಾದವಲ್ಲ. ಇಂದಿನ ಜಾಗತೀಕರಣದ ತಾಪಕ್ಕೆ ರೈತರು ನಲುಗಿದ್ದು, ಕುಡಿಯುವ ನೀರಿಲ್ಲದೆ ಜಾನುವಾರುಗಳು ನರಳುತ್ತಿರುವುದು, ಉಡಲು ಬಟ್ಟೆಯಿಲ್ಲದೇ, ಉಣಲು ಊಟವಿಲ್ಲದೆ ಜೀವಿಸುತ್ತರುವುದು ಸುಳ್ಳಲ್ಲ ತಾನೆ? ಹಾಗಂತ ಯಾರು ಸುಮ್ಮನೆ ಕೈ ಕಟ್ಟಿ ಕುಳಿತುಕೊಂಡಿಲ್ಲ. ಜಾಗತೀಕರಣದ ಬಿಸಿಗೆ ತಕ್ಕ ಸವಾಲನ್ನೊಡಿಕೊಂಡು ಬದುಕು ನಡೆಸುತ್ತಿದ್ದಾರೆ. ಅದೇ ರೀತಿಯಲ್ಲಿ ಜಾಗತೀಕರಣದ ಮತ್ತೊಂದು ಮುಖದಂತಿದೆ ಡಬ್ಬಿಂಗ್.  ಪರಭಾಷಾ ಚಿತ್ರಗಳ ವಿರುದ್ಧ ಕನ್ನಡ ಚಿತ್ರರಂಗಕ್ಕೂ ಆರೋಗ್ಯಕರ ಸ್ಪರ್ಧೆ ಬೇಕು. ನಮ್ಮಲ್ಲೂ ಉತ್ತಮ ನಿರ್ದೇಶಕರಿದ್ದಾರೆ. ಉತ್ತಮ ಬರಹಗಾರರಿದ್ದಾರೆ. ಉತ್ತಮ ತಂತ್ರಜ್ಞರಿದ್ದಾರೆ. ಅವರು ಸೃಜನಶೀಲತೆಯನ್ನು ಕಾಯ್ದುಕೊಂಡು ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡಬೇಕು. ಅದ್ಧೂರಿಗಿಂತ ಚಿತ್ರದ ಗುಣಮಟ್ಟವುಳ್ಳ ಚಿತ್ರಗಳು ಬೇಕು. ಅದು ಪ್ರತಿ ಹಳ್ಳಿಗಳಿಗೂ ತಲುಪಬೇಕು.

ಡಬ್ಬಿಂಗ್ ಮಾಡುವುದರಿಂದ ಕನ್ನಡ ಭಾಷೆಗೂ ಕುತ್ತು ಬರಲಿದೆ ಎಂಬ ಮಾತುಗಳಿವೆ. ಆ ಮಾತಿನಲ್ಲಿ ಹುರುಳಿಲ್ಲ. ಕನ್ನಡಕ್ಕೆ ತನ್ನದೇ ಗತಕಾಲದ ಇತಿಹಾಸವಿದೆ. ಕನ್ನಡ ಪ್ರತಿ ಕನ್ನಡಿಗನ ಅಂತಃಶಕ್ತಿಯಾಗಿ ಹರಿಯುತ್ತಿದೆ. ಅದು ಕನ್ನಡಕ್ಕಿರುವ ಶಕ್ತಿ. ಆ ಶಕ್ತಿಗೂ ಡಬ್ಬಿಂಗ್ ಭೂತಕ್ಕೂ ವ್ಯತ್ಯಾಸ ಕಲ್ಪಿಸುವುದು ಸಮಂಜಸವಲ್ಲ. ಭಾಷೆ ಬದಲಾಯಿಸುವ ಡಬ್ಬಿಂಗ್, ಪಾತ್ರಗಳ ತುಟಿಯ ಚಲನವಲನಗಳಲ್ಲಿ ಏಕರೂಪತೆಯನ್ನು ಸಾಧಿಸುವುದು ಕಷ್ಟಕರ. ಇದು ನೋಡುಗರಿಗೂ ತುಸು ತಾಸ್ರವೇ ಆದರೂ ಹೊಸ ಪ್ರಪಂಚವನ್ನು ಅದರ ಭಾವದ ವಿಸ್ತಾರತೆಯನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಅದನ್ನು ಒಪ್ಪುತ್ತೇವೆ.

ಇದು ಸಾರ್ವಜನಿಕವಾಗಿ ಚರ್ಚಿತವಾಗಬೇಕಾಗಿರುವ ವಿಚಾರ. ಬೇಕೆನ್ನುವವರೂ ಬೇಡವೆನ್ನುವವರು ನಡುವೆ ಕನ್ನಡಿಗರು ನಲುಗದಿರಲಿ. ಭಾರತದಿಂದ ಕರ್ನಾಟಕವಲ್ಲ; ಕರ್ನಾಟಕದಿಂದ ಭಾರತ. ಅದುವೇ ಒಕ್ಕೂಟ ವ್ಯವಸ್ಥೆ. ಈ ಒಕ್ಕೂಟ ವ್ಯವಸ್ಥೆಯಲ್ಲಿ ಡಬ್ಬಿಂಗ್ ನಿಷೇಧಿಸುವ ಹಕ್ಕು, ಸ್ವಾಗತಿಸುವ ಹಕ್ಕು ಅವರವರಿಗೆ ಬಿಟ್ಟಿದ್ದಲ್ಲ. ಅದು ಮನರಂಜನೆಗೆ ಸೀಮಿತ. ಆ ಸೀಮಿತದ ಭಾವ ವಿಸ್ತಾರಗೊಳ್ಳಲಿ... ಡಬ್ಬಿಂಗ್ ಪ್ರಜಾಪ್ರಭುತ್ವದ ಪ್ರಶ್ನೆಯಂತೂ ಅಲ್ಲವೇ ಅಲ್ಲ. ಸಂವಿಧಾನ ಬಾಹಿರವೂ ಅಲ್ಲ. ಅದರ ಪರಿಣಾಮ, ಪರಿಸರ, ವೇಷಭೂಷಣ, ಸ್ಥಿತಿ ಕನ್ನಡ ಚಿತ್ರರಂಗದ ಮೇಲೆ ಬೀರುವ ಪ್ರಭಾವ ಎಲ್ಲವೂ ಸೇರಿಕೊಂಡಿರುತ್ತೆ.


ಡಬ್ಬಿಂಗ್ ಬೇಕು ಎಂದು ಕೂಗುವ ದನಿ ಹಿಂದೆಯೂ ಬೇಡ ಎಂಬ ಕಿರಲು ಸದ್ದು ಕೇಳಿಬರುತ್ತಿದೆ. ಅದು ಸಾರ್ವಜನಿಕವಾಗಿ ಚರ್ಚಿಗೆ ಬಂದಾಗ ಡಬ್ಬಿಂಗ್ ನಿಷೇಧದ ಕುರಿತು ಉತ್ತರ ಕಂಡುಕೊಳ್ಳಲು ಸಾಧ್ಯವಾಗಬಹುದು. ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ, ಅದರ ಸಾಧಕ-ಬಾಧಕಗಳನ್ನು ವಿಶ್ಲೇಷಿಸಿ ತೀರ್ಮಾನಿಸುವುದು ಒಳಿತಲ್ಲವೇ..?

Wednesday, August 10, 2011

ಅವ್ವ ಮತ್ತು ಆ ದಿನ ನೆನಪು

ಪ್ಲೇವಿನ್ ಗೇಮ್‌ನಲ್ಲಿ ೫೦ ರೂ. ಬಂತು
ಅದರಲ್ಲಿ ಒಂದಷ್ಟು ಮಾತ್ರೆಗಳನು
ತಂದು ಅವ್ವನಿಗೆ ಕೊಟ್ಟೆ

ಉಬ್ಬಸ, ಉಸಿರುಗಟ್ಟುವಿಕೆಯಲಿ
ಬಳಲಿದ್ದ ಅವ್ವ
ತುಸು ಸುಧಾರಿಸಿದಳು

ಬಡ್ಡಿಮಗಂದು ಒಂದೆರಡು ಲಕ್ಷವಾದರೂ
ಬರ‍್ಬಾರ್ದ ಎಂದು ಸದಾ ಗೊಣಗುತ್ತಾ
ಬಸ್ ಛಾರ್ಜ್‌ಗೆ ಕೊಟ್ಟ
ಹಣವನ್ನು ಪ್ಲೇವಿನ್ ಲಾಟರಿಗೇ ಹೂಡುತ್ತಿದ್ದೆ

ಅದೃಷ್ಟ ನಮ್ಮ ಕೈಯಲ್ಲಿಲ್ಲ
ಹಣೆಬರಹ ಅಳಿಸಿ
ಕಷ್ಟಗಳನ್ನು ಮುಂದಿಡುತ್ತಾನೆ ದೇವರು
ಅದಕಾಗಿ ನಾನು ಅವನನ್ನು ನಂಬುವುದಿಲ್ಲ...

ಅಂದು!
ಇಂದಿಗೂ ಬಳಲಿದ ನೆನಪು
ಅವ್ವ ಹೇಳಿದ ಎಲ್ಲ ಘನ
ಕಾರ್ಯಗಳ ಮಾಡಿ ಮುಗಿಸಿದ
ತೃಪ್ತಿಯ ನೆನಪು
ತುಸು ಬಳಲಕೆ ಅಷ್ಟೆ...

ಒಂದು ತುಂಡ ಮೇಣಸಿನಗಿಡ
ಪಾತಿ ಮಾಡಿದ ಕೆಲಸ
ಒಂದು ಹೊರೆ ಹುಲ್ಲು....
ಮತ್ತೆ ಆಟದ ಮೈದಾನಕ್ಕಿಳಿದು
ಸೋಲು-ಗೆಲುವುಗಳ ಜತೆ
ಸರಸಕೆ ನಿಂತರೆ ಸಾಕು
ಗೆಲ್ಲಲೇಬೇಕೆಂಬ ಹಠ....
ಅಷ್ಟು ಸಾಕು ಅಂದಿಗೆ

ಹೊಟ್ಟೆ ಚುರುಗುಟ್ಟುತಿದೆ
ಕೋಣೆಗೆ ಬಂದು ನಿಂತರೆ
ಅವ್ವ ಮುದ್ದೆ ಮಾಡಲು ಪಡುತ್ತಿದ್ದ
ಪಾಡು ಕಂಡೆ...
ನಾನೇ ಕವಡುಗೋಲು ಹಿಡಿದು
ಹತ್ತಿಪ್ಪತ್ತು ಸುತ್ತು ತಿರುವಿ
ಅವ್ವನ ಕಡೆ ದಿಟ್ಟಿಸಿ
ಹೆಮ್ಮೆಯಿಂದ ಬೀಗಿದೆ...

ಅವಳ ಕಣ್ತುಂಬಾ ನನ್ನದೇ ಬಿಂಬ
ಮುಸುಕು ಮುಸುಕಾಗಿ
ಕಣ್ಣ ಹನಿಗಳಂತೆ ಜಾರುತ್ತಿತ್ತು
ಧನ್ಯತೆಯ ಭಾವ ತುಂಬಿಕೊಂಡಿದ್ದಳು

ರಾತ್ರಿ....
ನಿಶ್ಬಬ್ದ, ಮೌನ ಎರಡೂ
ಅಪ್ಪನ ಗೊರಕೆಗೆ
ಹಿರಿದುಕೊಂಡು ಕೊಲ್ಲಲ್ಪಟ್ಟವು
ನನ್ನ ಗಾಢ ನಿದ್ರೆಗೆ
ಒಂದಿನಿತೂ ಕೇಳದೇ
ಮುಂಜಾನೆ ಚೀರಿ ಸಾವು ಕಂಡಿವೆ
ಎಂಬ ಸುದ್ದಿ ತಿಳಿಯಿತು...

ಆಗ ಅವ್ವ ಇನ್ನೂ
ಮಲಗೇ ಇದ್ದಳು...
ಚಿರ ನಿದ್ರೆಯಲ್ಲಿ...
ನಾನು ಗಾಢ ನಿದ್ರೆಯಿಂದೆದ್ದು ಎಬ್ಬಿಸಿದರೂ
ಅವ್ವ ಏಳಲೇ ಇಲ್ಲ...

ಈ ಪಾಪಿಯ ಕಣ್ತುಂಬ ಹೊತ್ತು
ಕಣ್ಣೀರ ಮಾತ್ರ ಹಡೆದು
ಅವಳು ಚಿರಶಾಂತಿಯಲ್ಲಿ ಲೀನಳಾದಳು...

ಈ ಸತ್ಯ ಯಾರಿಗೂ ತಿಳಿಯಲೇ ಇಲ್ಲ
ಆಗ ನನಗೂ ಕೂಡ...
ಈಗ ಗೋಚರಿಸಿದೆ
ಅವ್ವನ ಭಾವಚಿತ್ರದಲ್ಲರಳಿದ ಕಣ್ಣಗಳಲ್ಲಿ...

Tuesday, June 28, 2011

ಮಾಯೆಯೊಳಗಿನ ಪುಳಕ


ನಾನು ಕಳೆದು ಹೋಗುತ್ತಿದ್ದೆ
ಯಾವುದೋ ಮರೀಚಿಕೆಯ
ಮಾಯೆಯೊಳಗೆ
ಶೂನ್ಯದಲ್ಲಲ್ಲ...
ಅದರ ಒಳ ಅರಿವಿನ
ಕಟ್ಟೆಯೊಳಗಿಂದ ಉಬ್ಬುವ
ನೀರಿನ ಮೇಲಿನ ಗುಳ್ಳೆಯಂತೆ....

ನನ್ನೊಳಗೆ ಆವಾರಿತ
ಬಯಕೆಗಳ ಉನ್ಮಾದ
ಶೃಂಗಾರಗೊಂಡು
ಪಟ್ಟೆಂದು ಹೊಡೆದು
ನೀರಾಗಿ ಹರಿದರೂ....
ಏನೋ ಸಂತಸ
ಹೃದಯದಲ್ಲೊಂದು
ನಿರ್ವೀಕಾರದ ಸೋಗು...

ಮಾಯೆಯೊಳಗೆ ಜಿಗಿದು
ಸೋಲುಂಡರೂ
ಮತ್ತೆ ಮತ್ತೆ...
ಎಡತಾಗಲೆಂದು...